ಕಾರ್ಯದರ್ಶಿ ವರದಿ: ಸರ್ವಸದಸ್ಯರ ಸಭೆ-2011

ಬೆಂಗಳೂರು ಕ್ರೀಡಾ ಬರಹಗಾರರ ಸಂಘದ ಎಲ್ಲ ಸದಸ್ಯ ಮಿತ್ರರಿಗೆ ನಮಸ್ಕಾರ ಹಾಗೂ ಹೃದಯಪೂರ್ವಕ ಸ್ವಾಗತ. ಸ್ವ್ಯಾಬ್ ಚಟುವಟಿಕೆಗಳಿಗೆ ಬೆಲೆಯುಳ್ಳ ಸಲಹೆಗಳನ್ನು ನೀಡುತ್ತಾ ಬಂದಿರುವ ಮಾಜಿ ಅಧ್ಯಕ್ಷರಾದ ಶ್ರೀ ಕಲ್ಯಾಣ್ ಅಶೋಕ್ ಹಾಗೂ ಶ್ರೀ ಎಂ.ಎ.ಪೊನ್ನಪ್ಪ ಅವರಿಗೆ ವಿಶೇಷವಾಗಿ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುತ್ತಾ ವಾರ್ಷಿಕ ವರದಿಯನ್ನು ತಮ್ಮ ಮುಂದೆ ಇಡುತ್ತಿದ್ದೇನೆ. ಜೊತೆಗೆ ದಶಕದ ನಂತರ ಬೆಂಗಳೂರಿಗೆ ಹಿಂದಿರುಗಿರುವ ನಮ್ಮೆಲ್ಲರ ಆತ್ಮೀಯರಾದ ಶ್ರೀ ಗೋಪಾಲಕೃಷ್ಣ ಹೆಗಡೆ ಅವರಿಗೆ ಬೆಂಗಳೂರು ಕ್ರೀಡಾ ಬರಹಗಾರರ ಸಂಘದ 2011ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆಗೆ ಸ್ವಾಗತಿಸುತ್ತೇನೆ. ಹೆಗಡೆ ಅವರು ಈ ಹಿಂದೆ ಸ್ವ್ಯಾಬ್ ಚಟುವಟಿಕೆಗಳ ಜೀವನಾಡಿ ಆಗಿದ್ದವರು. ಅವರು ಮತ್ತೆ ನಮ್ಮೊಂದಿಗೆ ಇದ್ದಾರೆ. ಅವರು ಈ ಹಿಂದೆ ಸ್ವ್ಯಾಬ್ ಗಾಗಿ ಮಾಡಿದ ಕೆಲಸಗಳು ನಮಗೆ ಈಗಲೂ ಪ್ರೇರಣೆ.

2011ನೇ ಸಾಲು ಬೆಂಗಳೂರು ಕ್ರೀಡಾ ಬರಹಗಾರರ ಸಂಘದ 35ನೇ ಸ್ಥಾಪನಾ ವರ್ಷವಾಗಿದೆ. ಆದ್ದರಿಂದ ಈ ವರ್ಷವನ್ನು ವಿಶಿಷ್ಟವಾದ ಚಟುವಟಿಕೆಗಳಿಂದ ಅಲಂಕರಿಸಬೇಕು ಎನ್ನುವುದು ನಮ್ಮ ಉದ್ದೇಶ. ಆ ನಿಟ್ಟಿನಲ್ಲಿ ಈಗಾಗಲೇ ಹಲವಾರು ಚಟುವಟಿಕೆಗಳನ್ನು ನಾವು ಎಲ್ಲ ಕಾರ್ಯಕಾರಿ ಸಮಿತಿ ಸದಸ್ಯರ ಸಹಕಾರದಿಂದ ಮಾಡಿದ್ದೇವೆ. ನನ್ನೊಂದಿಗೆ ಉತ್ಸಾಹದಿಂದ ಕೈಜೋಡಿಸಿ, ಪ್ರೋತ್ಸಾಹ ನೀಡುತ್ತಾ, ಎಲ್ಲ ಕಾರ್ಯಕ್ರಮ ನಡೆಸಲು ಹುಮ್ಮಸ್ಸು ನೀಡಿದ ಎಲ್ಲ ಕಾರ್ಯಕಾರಿ ಸಮಿತಿ ಸದಸ್ಯರಿಗೆ ನಾನು ಕೃತಜ್ಞನಾಗಿದ್ದೇನೆ. ಜೊತೆಗೆ ರೂಪಿಸಿದೆಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಉತ್ಸಾಹ ಹೆಚ್ಚಿಸಿದ ಎಲ್ಲ ಸದಸ್ಯರಿಗೂ ನಾನು ಧನ್ಯವಾದ ಹೇಳುತ್ತೇನೆ.

ಸ್ವ್ಯಾಬ್ ಎನ್ನುವುದು ವರ್ಷಕ್ಕೊಮ್ಮೆ ಪ್ರಶಸ್ತಿ ನೀಡುವ ವೇದಿಕೆಯಾಗಿ ಮಾತ್ರ ಉಳಿಯಬಾರದು ಎನ್ನುವುದು ಕಾರ್ಯಕಾರಿ ಸಮಿತಿ ಆಶಯ. ಆದ್ದರಿಂದ ಸದಸ್ಯರಿಗೆ ಪ್ರಯೋಜನವಾಗುವಂಥ ಹಾಗೂ ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳುವುದಕ್ಕೆ ಸಾಧ್ಯವಾಗುವಂಥ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸುವುದು ಕಾರ್ಯಕಾರಿ ಸಮಿತಿ ಉದ್ದೇಶ. ಆ ನಿಟ್ಟಿನಲ್ಲಿ ಈ ವರ್ಷ ಹಲವಾರು ಕಾರ್ಯಕ್ರಮಗಳನ್ನು ಸ್ವ್ಯಾಬ್ ವಿವಿಧ ಸಂಘ-ಸಂಸ್ಥೆಗಳ ನೆರವಿನೊಂದಿಗೆ ಮಾಡಿದೆ.

ವರ್ಷದ ಆರಂಭದಲ್ಲಿಯೇ ಕರ್ನಾಟಕ ಲೆಗ್ ಕ್ರಿಕೆಟ್ ಸಂಸ್ಥೆ ಆಶ್ರಯದಲ್ಲಿ ಕ್ರೀಡಾ ಶಿಕ್ಷಕರೊಂದಿಗೆ ನಮ್ಮ ಕ್ರೀಡಾ ವರದಿಗಾರರು ವಿಶಿಷ್ಟವಾದ ಲೆಗ್ ಕ್ರಿಕೆಟ್ ಪಂದ್ಯವನ್ನು ಆಡಿ ಸಂತಸಪಟ್ಟಿದ್ದಾರೆ. ವಿಶೇಷವೆಂದರೆ ಕ್ರೀಡಾ ಪತ್ರಕರ್ತರ ತಂಡವೇ ಆ ಪಂದ್ಯದಲ್ಲಿ ವಿಜಯ ಸಾಧಿಸಿತು. ಆನಂತರ ಕರ್ನಾಟಕ ರಾಜ್ಯ ಫುಟ್ ಬಾಲ್ ಸಂಸ್ಥೆಯ ಸಹಕಾರದೊಂದಿಗೆ ಮಾಜಿ ಫುಟ್ ಬಾಲ್ ಆಟಗಾರರ ಜೊತೆಗೆ ಫುಟ್ ಬಾಲ್ ಪ್ರದರ್ಶನ ಪಂದ್ಯವನ್ನು ಕೂಡ ನಮ್ಮ ಕ್ರೀಡಾ ವರದಿಗಾರರ ತಂಡ ಆಡಿತು. ಈ ಪಂದ್ಯವನ್ನು ಸಂಘಟಿಸುವಲ್ಲಿ ಶ್ರೀಕುಮಾರ್ ಅವರು ತೋರಿದ ಆಸಕ್ತಿಯನ್ನು ಈ ಸಂದರ್ಭದಲ್ಲಿ ಸ್ಮರಿಸುವುದು ನನ್ನ ಕರ್ತವ್ಯ.

ಭಾರಿ ಉತ್ಸಾಹದಿಂದ ನಡೆದ ಸ್ವ್ಯಾಬ್ ಸ್ನೂಕರ್ ಟೂರ್ನಿಯನ್ನು ಬೆಂಗಳೂರು ವಿಹಾರ ಕೇಂದ್ರ ಹಾಗೂ ಕದಿರೇನಹಳ್ಳಿ ಸ್ನೂಕರ್ ಪಾಯಿಂಟ್ ಸಹಯೋಗದಲ್ಲಿ ನಡೆಸಲಾಯಿತು. ಅದರಲ್ಲಿ ಮೂವತ್ತಕ್ಕೂ ಹೆಚ್ಚು ಕ್ರೀಡಾ ವರದಿಗಾರರು ಹಾಗೂ ಕ್ರೀಡಾ ಛಾಯಾಗ್ರಾಹಕರು ಹಾಗೂ ಮಾಧ್ಯಮ ವರದಿಗಾರರು ಪಾಲ್ಗೊಂಡು ಸಂತಸ ಹಂಚಿಕೊಂಡರು. ಆರ್. ಸತ್ಯ ಅವರು ಈ ಟೂರ್ನಿಯಲ್ಲಿ ತಮ್ಮ ಪ್ರಭಾವಿ ಆಟದಿಂದ ಚಾಂಪಿಯನ್ ಆಗಿ ಹೊರಹೊಮ್ಮಿದರು. ಆರ್. ಸತ್ಯ ಅವರು ಪುಣೆಯಲ್ಲಿ ನಡೆದ ಎಸ್.ಜೆ.ಎಫ್.ಐ ವಾರ್ಷಿಕ ಸಮಾವೇಶದಲ್ಲಿ ಪಾಲ್ಗೊಂಡು, ಅದರ ಅಂಗವಾಗಿ ನಡೆದ ಕ್ರೀಡಾ ಚಟುವಟಿಕೆಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಪ್ರಶಸ್ತಿ ಕೂಡ ಗೆದ್ದು ಗಮನ ಸೆಳೆದಿದ್ದಾರೆ. ಮಲ್ಲಿಕಾಚರಣ ವಾಡಿ, ಅಭಿಷೇಕ್ ಬಾಡ್ಕರ್, ಸತೀಶ್ ವಿಶ್ವನಾಥ್, ಸತೀಶ್ ಪಾಲ್, ಮೊಹಮ್ಮದ್ ನೂಮಾನ್ ಹಾಗೂ ಓಂಕಾರ ಮೂತರ್ಿ ಅವರೂ ಎಸ್.ಜೆ.ಎಫ್.ಐ ವಾರ್ಷಿಕ ಸಮಾವೇಶದಲ್ಲಿ ಬೆಂಗಳೂರು ಕ್ರೀಡಾ ವರದಿಗಾರರ ಸಂಘವನ್ನು ಪ್ರತಿನಿಧಿಸಿದ್ದರು.

ಕಳೆದ ಬಾರಿಯ ವಾರ್ಷಿಕ ಸರ್ವಸದಸ್ಯರ ಸಭೆಗೆ ಮುನ್ನ ನಾನು ನೀಡಿದ್ದ ಭರವಸೆಯಂತೆ ಹಲವಾರು ಕೆಲಸಗಳನ್ನು ಪೂರೈಸುವ ಪ್ರಯತ್ನವನ್ನು ಕಾರ್ಯಕಾರಿ ಸಮಿತಿಯ ಸಹಕಾರದಿಂದ ಮಾಡಿ ಮುಗಿಸಲು ಪ್ರಯತ್ನ ಮಾಡಿದ್ದೇನೆ. ಸ್ವ್ಯಾಬ್ ಸದಸ್ಯರಿಗೆ ಆಕರ್ಷಕವಾದ ಸದಸ್ಯತ್ವದ ಕಾರ್ಡ್ ನೀಡಲಾಗಿದೆ. ಅದರ ಜೊತೆಗೆ ಪ್ರೇಮಾ ಡೇವಿಡ್ ಅವರು ಕೊಡುಗೆಯಾಗಿ ನೀಡಿದ ಕಾರ್ಡ್ ಹೋಲ್ಡರ್ ಕೂಡ ನೀಡಲಾಗಿದೆ. ಒಟ್ಟು 37 ಸದಸ್ಯರು ತಮ್ಮ ಸದಸ್ಯತ್ವದ ಫಾರ್ಮ್ ನೀಡಿದ್ದಾರೆ. ಇನ್ನೂ ಅನೇಕ ಸದಸ್ಯರು ಸದಸ್ಯತ್ವದ ಫಾರ್ಮ್ ನೀಡಿಲ್ಲ. ಅವರು ಕೂಡ ಸದಸ್ಯತ್ವದ ಫಾರ್ಮ್ ನೀಡಿ, ತಮ್ಮ ಸದಸ್ಯತ್ವದ ಕಾರ್ಡ್ ಪಡೆದುಕೊಳ್ಳಬೇಕಾಗಿ ಈ ಸಂದರ್ಭದಲ್ಲಿ ನಾನು ಕೇಳಿಕೊಳ್ಳುತ್ತೇನೆ.

"ಸ್ವ್ಯಾಬ್ ರಿಪೋರ್ಟರ್ ಬ್ಲಾಗ್" ಕಳೆದ ಎಂಟು ತಿಂಗಳಿಂದ ಸಾಕಷ್ಟು ಓದುಗರನ್ನು ಸೆಳೆದಿದೆ. ಕ್ರೀಡಾ ವರದಿಗಾರರ ವಿವಿಧ ಚಟುವಟಿಕೆ ಹಾಗೂ ಅನುಭವದ ಬುತ್ತಿಯನ್ನು ಜನರೊಂದಿಗೆ ಹಂಚಿಕೊಳ್ಳಲು ಇದೊಂದು ವಿಶಿಷ್ಟವಾದ ಬ್ಲಾಗ್ ಆಗಿದೆ. ಇದು ಈಗಾಗಲೇ ಎಂಬತ್ತು ಸಾವಿರಕ್ಕೂ ಹೆಚ್ಚು ಹಿಟ್ಸ್ ಗಳನ್ನು ಹೊಂದಿದೆ. ಇಂಗ್ಲಿಷ್ ಲೇಖನಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿರುವುದಂತೂ ನಿಜ. ಪಿ.ಆರ್.ವಿಶ್ವನಾಥ್ ಅವರು ರಾಜನ್ ಬಾಲಾ ಕುರಿತು ಬರೆದ ಲೇಖನಕ್ಕೆ ಒಂದೇ ದಿನದಲ್ಲಿ 9000 ಹಿಟ್ಸ್ ಬಂದಿದ್ದು ವಿಶೇಷ. ಅಂಥ ಅನುಭವಪೂರ್ಣವಾದ ಹಾಗೂ ಮನತಟ್ಟುವಂಥ ಲೇಖನಗಳನ್ನು ತಾವು ಕೂಡ ಸ್ವ್ಯಾಬ್ ರಿಪೋರ್ಟರ್ ಬ್ಲಾಗ್ ಗಾಗಿ ಬರೆದು ಕಳುಹಿಸಬೇಕೆಂದು ವಿನಂತಿಸುತ್ತೇನೆ.

"ಸ್ವ್ಯಾಬ್ ಫೋರಂ" ವೆಬ್ಸೈಟ್ ಅಂತಿಮ ರೂಪವನ್ನು ಪಡೆದಿದ್ದು ಶೀಘ್ರದಲ್ಲಿಯೇ ಆನ್ ಲೈನ್ ನಲ್ಲಿ ಲಭ್ಯವಾಗಲಿದೆ. ಅದನ್ನು ವಿಶಿಷ್ಟವಾದ ಕಾರ್ಯಕ್ರಮದಲ್ಲಿ ಲಾಂಚ್ ಮಾಡುವುದು ಕಾರ್ಯಕಾರಿ ಸಮಿತಿ ಉದ್ದೇಶವಾಗಿದೆ. ಸ್ವ್ಯಾಬ್ ಖಜಾನೆಯಂತೆ ಇರುವ ಪ್ರೆಸ್ ಕ್ಲಬ್ ನಲ್ಲಿನ ಅಲ್ಮಾರಿಯಲ್ಲಿ ಅನೇಕ ನೆನಪುಗಳು ಚಿತ್ರಗಳಾಗಿ ಲಭ್ಯವಿವೆ. ಅವೆಲ್ಲವನ್ನೂ ಸ್ವ್ಯಾಬ್ ಫೋರಂ ಮೂಲಕ ಆನ್ ಲೈನ್ನಲ್ಲಿ ಹರಿಬಿಡಲು ವ್ಯವಸ್ಥೆ ಮಾಡಲಾಗಿದೆ. ಸ್ವ್ಯಾಬ್ ಫೋರಂ ವೆಬ್ ಸೈಟ್ ಗಾಗಿ ಸ್ವ್ಯಾಬ್ ಇತಿಹಾಸದ ಕುರಿತು ಪಿ.ಆರ್.ವಿಶ್ವನಾಥ್ ಅವರು ವಿಶಿಷ್ಟವಾದ ಲೇಖನವನ್ನು ಬರೆದುಕೊಟ್ಟಿದ್ದಾರೆ. ಅದಕ್ಕಾಗಿ ನಾವು ಅವರಿಗೆ ಕೃತಜ್ಞರಾಗಿರುತ್ತೇವೆ.

ಕಷ್ಟದಲ್ಲಿರುವ ಕ್ರೀಡಾ ವರದಿಗಾರರಿಗೆ ಸಾಧ್ಯವಾದ ಮಟ್ಟಿಗೆ ಆರ್ಧಿಕ ನೆರವು ನೀಡುವುದು ಸ್ವ್ಯಾಬ್ ಹೃದಯವಂತಿಕೆಯಾಗಿದೆ. ಮುಂಬೈನ ಪ್ರದೀಪ್ ವಿಜಯಕರ್ ಅವರ ವೈದ್ಯಕೀಯ ವೆಚ್ಚಕ್ಕಾಗಿ ಸ್ವ್ಯಾಬ್ ಮೂಲಕ ಈ ಬಾರಿ 15,000 ರೂಪಾಯಿ ಆರ್ಥಿಕ ನೆರವು ನೀಡಲಾಗಿದೆ.

ಸ್ವ್ಯಾಬ್ ಗಾಗಿ ಕಂಠೀರವ ಕ್ರೀಡಾಂಗಣದಲ್ಲಿ ಕೋಣೆಯೊಂದನ್ನು ಪಡೆಯುವುದು ಉದ್ದೇಶವಾಗಿತ್ತು. ಈ ವಿಷಯವಾಗಿ ಮುಖ್ಯಮಂತ್ರಿಗಳು ಹಾಗೂ ಕ್ರೀಡಾ ಸಚಿವರಿಗೆ ವಿನಂತಿಯನ್ನು ನೀಡಲಾಗಿತ್ತು. ಎಂ.ಎ.ಪೊನ್ನಪ್ಪ ಅವರ ಪ್ರಯತ್ನದ ಫಲವಾಗಿ ಕೋಣೆ ಸ್ವ್ಯಾಬ್ಗೆ ಸಿಗುವ ಹಂತದಲ್ಲಿ ಇದ್ದಾಗಲೇ, ತೊಡಕು ಎದುರಾಯಿತು. ಆದರೂ ಮತ್ತೆ ಎಂ.ಎ.ಪೊನ್ನಪ್ಪ ಅವರ ಬೆಂಬಲದೊಂದಿಗೆ ಕೋಣೆಯನ್ನು ಪಡೆಯಲು ಪ್ರಯತ್ನ ಮಾಡುತ್ತೇವೆ ಎನ್ನುವ ಭರವಸೆಯನ್ನು ಕಾರ್ಯಕಾರಿ ಸಮಿತಿ ಪರವಾಗಿ ತಮಗೆ ನೀಡುತ್ತೇನೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಸ್ವ್ಯಾಬ್ ತನ್ನದೇ ಆದ ಕ್ಲಬ್ ಹೊಂದುವುದಕ್ಕೆ ಅಗತ್ಯವಿರುವ "ಸಿಎ" ಸೈಟ್ವೊಂದನ್ನು ನೀಡುವುದಕ್ಕೆ ಸಿದ್ಧವಿದೆ. ಅದಕ್ಕಾಗಿ ಮೂರು ಸ್ಥಳಗಳನ್ನು ಈಗಾಗಲೇ ತೋರಿಸಿದೆ. ಆದರೆ ಅವೆಲ್ಲವೂ ಬೆಂಗಳೂರು ಕೇಂದ್ರ ಭಾಗದಿಂದ ಬಹಳ ದೂರದಲ್ಲಿವೆ. ಆದ್ದರಿಂದ ತಮ್ಮ ಗಮನಕ್ಕೆ ಬೆಂಗಳೂರು ಕೇಂದ್ರ ಭಾಗದಲ್ಲಿ ಯಾವುದಾದರೂ ಖಾಲಿ "ಸಿಎ" ಸೈಟ್ ಗಮನಕ್ಕೆ ಬಂದರೆ ಅಲ್ಲಿ ಸ್ವ್ಯಾಬ್ ಕ್ಲಬ್ ಸ್ಥಾಪಿಸಲು ಅಗತ್ಯವಾದ ಪ್ರಕ್ರಿಯೆ ನಡೆಸಬಹುದು.

ಮುಂಬೈ, ಕೋಲ್ಕತ್ತ, ಚೆನ್ನೈ, ಅಹಮದಾಬಾದ್, ಚಂಡೀಗಡದಲ್ಲಿ ಕ್ರೀಡಾ ಪತ್ರಕರ್ತರಿಗೆ ನೀಡಲಾಗಿರುವ ವಿಶೇಷ ಸರ್ಕಾರಿ ಮಾನ್ಯತಾ ಪತ್ರವು ಬೆಂಗಳೂರಿನ ಕ್ರೀಡಾ ವರದಿಗಾರರಿಗೂ ಲಭ್ಯವಾಗುವಂತೆ ಮಾಡುವುದು ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ದಾಖಲೆಗಳನ್ನು ಒಗ್ಗೂಡಿಸಿ, ವಾರ್ತಾ ಮತ್ತು ಪ್ರಚಾರ ಇಲಾಖೆಗೆ ನೀಡಲು ಪ್ರಯತ್ನ ಮಾಡಲಾಗುತ್ತಿದೆ.

2012ರಲ್ಲಿ ಬೆಂಗಳೂರು ಕ್ರೀಡಾ ವರದಿಗಾರರ ಸಂಘವು ಎಸ್.ಜೆ.ಎಫ್.ಐ ವಾರ್ಷಿಕ ಸಮಾವೇಶವನ್ನು ಬೆಂಗಳೂರಿನಲ್ಲಿ ನಡೆಸಲು ಬಯಸಿದೆ. ಅದಕ್ಕಾಗಿ ಬಿಡ್ ಪ್ರಕ್ರಿಯೆಗೆ ತಯಾರಿ ನಡೆದಿದೆ. ಆ ವಿಷಯವಾಗಿ ತಾವೆಲ್ಲರೂ ತಮ್ಮ ಬೆಂಬಲ ಹಾಗೂ ಸಹಕಾರವನ್ನು ನೀಡಬೇಕಾಗಿ ವಿನಂತಿ ಮಾಡುತ್ತಾ ನನ್ನ ಈ ವರದಿಯನ್ನು ಕೊನೆಗೊಳಿಸುತ್ತೇನೆ.

ಎಲ್ಲರಿಗೂ ಧನ್ಯವಾದಗಳು.

Justify Full ಡಿ.ವಿ.ಗರುಡ
ಕಾರ್ಯದರ್ಶಿ,
ಬೆಂಗಳೂರು ಕ್ರೀಡಾ ಬರಹಗಾರರ ಸಂಘ

INTERIM PRESIDENT SPEECH AT AGM

Dear Members,

I stand before you as the president of SWAB for the first time, at what I personally feel is an important stage in the history of our association.

By its very definition, an association is the coming together of people to meet common goals and purposes. It is inevitable that, even within the ambit of an association, there will be differences of opinion and divergent views. As mature adults, it is our responsibility to work around these differences which, I must stress, should never be allowed to assume personal hues.

It’s been an eventful time since our last AGM, with action flying thick and fast on the sporting front. Given the profusion of events, it has been extremely difficult for SWAB to be as active as we would have liked it to be, but from my friend DV Garud, the secretary’s report, it is obvious that despite the constraints, we have tried to implement the activities we could. With this being SWAB's 35th year, we hope to execute several of the plans that are in place.

It’s notable and fitting that most of our successes in the time since we met last have been on the playing field! The Bangalore component of South Zone has done exceedingly well in the SJFI’s annual conventional and sports meets over the last two years. Last year, South Zone won the cricket title for the first time since 1998, and this time, the weather thwarted our designs of defending that title.

SWAB had great success in table tennis, football (penalty kicks) and putting, too. We also have representatives in the SJFI’s list of office-bearers, with my predecessor Mr SS Shreekumar being elected one of the vice-presidents and I being elected to the executive committee. Significantly, both of us polled the highest number of votes for our respective posts, an indication of the affection and respect with which the rest of the fraternity views SWAB.

This change of guard at the helm of SWAB, therefore, was necessary for us to remain a team, and to continue to enjoy the goodwill and support of the other units across the country. There have been simmering tensions within our association for the last several months, as most of you are well aware, and things had come to such a pass that EC meetings were becoming acrimonious and leaving a bad taste in the mouth.

The bottom line is that we are not here to confront and contradict. Every problem, perceived or real, has a solution, and that solution inevitably involves dialogue.

A way was sought to be found around the imbroglio that has led us to this situation, but unfortunately, that didn’t eventuate. I don’t wish to use this platform to discuss at length the compulsions that forced us to opt for a change at the helm of SWAB, though I will confess that the entire situation should have been handled with more tact and common sense had some of us not allowed our egos to come in the way.

That sorry chapter is behind is, and now it’s time to look ahead. I will address the questions raised by outgoing president Mr Shreekumar in the e-mail he has forwarded to several members of the association, but as I said before, this is not the forum for that. I would like to believe we are here to spark a new beginning. The Executive Committee has decided that to commemorate our 35th anniversary, SWAB should bid for the right to host the SJFI convention and the sporting disciplines.

Irrespective of whether our bid is successful or not, it’s my earnest request to everyone here, and to those not here today but who are still very much a part of SWAB, that we move forward as a team and as an association. We must solve problems that will arise from time to time amicably, and realise that this is a platform to come together and share our views, time and thoughts, not an avenue for mud-slinging and taking pot-shots.

Thanking you,

Yours sincerely,

R.Kaushik, Interim President
Sports Writers' Association of Bangalore

`ಪತ್ರಿಕಾ ದಿನ' ...ಮೊಗ್ಲಿಂಗ್ ಸ್ಮರಣೆ

ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಹಾಗೂ
"ಪ್ರಜಾವಾಣಿ" ಸಹಾಯಕ ಸಂಪಾದಕರಾದ
ಎಂ.ಎ.ಪೊನ್ನಪ್ಪ ಅವರು ಪತ್ರಿಕಾ
ದಿನದಂದು ಮಾಡಿದ ಭಾಷಣ


ಪ್ರತಿ ವರ್ಷ ಜುಲೈ 1 ರಂದು ಕರ್ನಾಟಕದಲ್ಲಿ `ಪತ್ರಿಕಾ ದಿನ' ಆಚರಿಸಲಾಗುತ್ತದೆ. ಕನ್ನಡ ಪತ್ರಿಕೋದ್ಯಮದ ಸ್ಥಿತಿಗತಿಗಳ ಕುರಿತು ಈ ದಿನ ಚರ್ಚೆ ನಡೆಯುವುದು ಕೂಡ ಅಷ್ಟೇ ಸಹಜ. ಪತ್ರಿಕೋದ್ಯಮದ ಪರಿಚಯ ಜನಸಾಮಾನ್ಯರಿಗಾಗಬೇಕು ಅದೇ ಇಂಥದೊಂದು ದಿನವನ್ನು ಆಚರಿಸುವ ವಿಶೇಷ. ಜನ ಸಾಮಾನ್ಯರ ಒಳಿತಿಗೆ ನಿರಂತರ ದುಡಿಯುವ ಪತ್ರಕರ್ತರ ಬೆನ್ನು ಚಪ್ಪರಿಸಬೇಕೆನ್ನುವುದು ಈ ದಿನಾಚರಣೆಯ ಸದುದ್ದೇಶ.

ಮಾನವನ ಸರ್ವತೋಮುಖ ಬೆಳವಣಿಗೆಯಲ್ಲಿ ಮುದ್ರಣ ಕಲೆ ಮಹತ್ತರ ಪಾತ್ರ ವಹಿಸಿದೆ. ಮುದ್ರಣ ಮಾಧ್ಯಮ ಜಗತ್ತಿನ ಎಲ್ಲ ದೇಶಗಳನ್ನು ಹತ್ತಿರಕ್ಕೆ ತಂದಿದೆ ಹಾಗೂ ಪರಿಚಯಿಸಿಕೊಟ್ಟಿದೆ. ಮೊದಲು ಪುಸ್ತಕಗಳು ನಂತರ ನಿಯತಕಾಲಿಕೆಗಳು ಹಾಗೂ ದಿನಪತ್ರಿಕೆಗಳು ಜ್ಞಾನದ ಪ್ರಸರಣ ಆರಂಭಿಸಿದವು. ಜರ್ಮನಿಯ ಜಾನ್ ಗುಟೆನ್ ಬರ್ಗ್ 1440ರಲ್ಲಿ ಎರಕಹೊಯ್ದ ಅಚ್ಚುಮೊಳೆ ತಯಾರಿಸಿ, ಪವಿತ್ರ ಗ್ರಂಥ `ದಿ ಬೈಬಲ್' ಅನ್ನು ದಪ್ಪನೆಯ ಹಾಳೆಯ ಮೇಲೆ ಮುದ್ರಿಸಿದಾಗ, ಅದೊಂದು ಕ್ರಾಂತಿಕಾರಕ ಆವಿಷ್ಕಾರವಾಗಿತ್ತು. ಮುದ್ರಣ ಜ್ಞಾನದ ದಾಹ ತಣಿಸುವ ಪ್ರಮುಖ ಸೆಲೆಯಾಯಿತು. ನಾಗರಿಕತೆಯ ಬೆಳವಣಿಗೆಯಲ್ಲಿ ಅತ್ಯಂತ ನಿರ್ಣಾಯಕ ಪಾತ್ರವಹಿಸಿದ ಹಲವೇ ಸಾಧನೆಗಳಲ್ಲಿ ಮುದ್ರಣಯಂತ್ರ ಸಹ ಒಂದು ಎಂದು ಆಧುನಿಕ ಇತಿಹಾಸಕಾರರು ಒಪ್ಪಿಕೊಂಡಿದ್ದಾರೆ.

ಯೇಸುಕ್ರಿಸ್ತನ ಸಂದೇಶಗಳನ್ನು ಜಗತ್ತಿಗೆ ತಿಳಿಸಬೇಕೆಂಬ ಹಂಬಲದಿಂದ ಯುರೋಪಿನಲ್ಲಿ ಹಲವು ಧರ್ಮಪ್ರಸಾರ ಸಂಸ್ಥೆಗಳು ಹುಟ್ಟಿಕೊಂಡವು. ಜರ್ಮನಿ-ಪ್ರಾನ್ಸ್ ದೇಶಗಳ ಗಡಿಗೆ ಹೊಂದಿಕೊಂಡಿರುವ ಪುಟ್ಟ ಪಟ್ಟಣವಾದ ಬಾಸೆಲ್ ನಲ್ಲಿ ಅಂದಿನ ಜನ ಯುರೋಪಿನಲ್ಲಿನ ಯುದ್ಧಗಳಿಂದ ಬೇಸತ್ತಿದ್ದರು. ದೇವರ ಸೇವೆ ಮಾಡಿದರೆ ಶಾಂತಿ ನೆಲಸಬಹುದೆಂಬ ಸದುದ್ದೇಶದಿಂದ ಆರು ಜನ ಪ್ರಮುಖರು ಕಟ್ಟಿದ ಧರ್ಮಪ್ರಸಾರ ಸಂಸ್ಥೆ ಮುಂದೆ ಬಾಸೆಲ್ ಮಿಷನ್ ಎಂದು ಹೆಸರಾಯಿತು.

ಸ್ಯಾಮುಯಲ್ ಹೆಬಿಕ್ ಸೇರಿದಂತೆ ಮೂವರು 1834ರಲ್ಲಿ ಕಲ್ಲಿಕೋಟಿ ತಲುಪಿದರು. ನಂತರ ಮಂಗಳೂರಿಗೆ ಪಯಣಿಸಿದರು. ಬ್ರಿಟಿಷರ ಆಡಳಿತಕ್ಕೆ ಭಾರತ ಒಳಪಟ್ಟಿದ್ದರಿಂದ, ಬಾಸೆಲ್ ಧರ್ಮಪ್ರಚಾರ ಸಂಸ್ಥೆ ವಿಶೇಷ ಅನುಮತಿಯನ್ನು ಪಡೆದು, ತಮ್ಮ ಕಾರ್ಯಚಟವಟಿಕೆಗಳನ್ನು ಆರಂಭಿಸಿದರು. 168 ವರ್ಷಗಳ ಇತಿಹಾಸದ ಈ ಮಹಾನ್ ಸಂಸ್ಥೆ ಕನ್ನಡಿಗರಿಗೆ ಮೊದಲ ಸಲ ಮುದ್ರಣ ಕಲೆ ಪರಿಚಯಿಸಿತು. ಭಾರತದ ಮೊದಲ ಪತ್ರಿಕೆ 1780ರಲ್ಲೇ ಆರಂಭಿವಾಗಿತ್ತು. ಕಲ್ಕತ್ತಾ ನಗರದಲ್ಲಿ ಅದು ಆಂಗ್ಲ ಭಾಷೆಯಲ್ಲಿ ಪ್ರಕಟವಾಗುತ್ತಿತ್ತು.

ಧರ್ಮ ಪ್ರಸಾರದ ಜತೆಗೆ ಅನೇಕ ಉಪಯುಕ್ತವಾದ ಶೈಕ್ಷಣಿಕ ಹಾಗೂ ಕೈಗಾರಿಕಾ ತರಬೇತಿಗಳನ್ನು ಈ ಸಂಸ್ಥೆ ಆರಂಭಿಸಿತು. 1843ರಲ್ಲಿ ಒಂದು ಪತ್ರಿಕೆಯನ್ನು ಆರಂಭಿಸಿ ನಿಖರವಾದ ಸುದ್ದಿಯನ್ನು ಜನತೆಗೆ ನೀಡಬೇಕೆಂದು ನಿರ್ಧರಿಸಿತು. ಅಂಚೆ ಸೌಲಭ್ಯ ಬಿಟ್ಟರೆ, ಉಳಿದ ಯಾವ ಬಗೆಯ ಸಂಪರ್ಕ ಸಾಧನಗಳಿರಲಿಲ್ಲ. ಗಾಳಿ ಸುದ್ದಿಗೆ ಹೆಚ್ಚಿನ ಪ್ರಧಾನವಿತ್ತು. ಈ ಮಹತ್ಕಾರ್ಯದ ರೂವಾರಿ ಹೆರ್ಮನ್ ಪ್ರೆಢರಿಕ್ ಮೊಗ್ಲಿಂಗ್. ಕನ್ನಡ ಪತ್ರಿಕೋದ್ಯಮದ ಮೂಲಪುರುಷ.

"ಕಿಟಕಿಯಿರದ ಬಿಡಾರದಲ್ಲಿರುವ ಜನರಿಗೆ ಪತ್ರಿಕೆಗಳ ಮೂಲಕ ನಾಲ್ಕು ದಿಕ್ಕಿಗೆ ಬೆಳಕು ಬಿರುವ ಹಾಗೆ" ಸಮಾಚಾರ ನಿಡುವ ಪಾಕ್ಷಿಕ ಪ್ರಕಟಣೆಯಾದ "ಮಂಗಳೂರು ಸಮಾಚಾರ" 1843 ಜುಲೈ 1ರಂದು ಹೊರಡಿಸುವ ಐತಿಹಾಸಿಕ ನಿರ್ಧಾರ ಕೈಗೊಂಡನು. ಈ ಪತ್ರಿಕೆ ಕನ್ನಡ ಪತ್ರಿಕಾ ಲೋಕಕ್ಕೆ ಮುನ್ನುಡಿ ಬರೆಯಿತು. ಈ ಮಹತ್ತರ ಕೊಡುಗೆಯ ಮೂಲಕ ಹರ್ಮನ ಪೆಡ್ರಿಕ್ ಮೊಗ್ಲಿಂಗ್ ಕನ್ನಡ ಪತ್ರಿಕೋದ್ಯಮದ ಆದ್ಯ ಪ್ರವರ್ತಕನಾದ. ಮೊಗ್ಲಿಂಗ್ ಮತಾಂತರಕ್ಕೆ ಮಹತ್ವ ನೀಡದೆ, ಜನಸಮೂಹದ ಬೌದ್ದಿಕ ಸುಧಾರಣೆಗೆ ಒತ್ತು ನೀಡಿದ ಮೇಧಾವಿ.

ಮೊಗ್ಲಿಂಗ್ ಹುಬ್ಬಳ್ಳಿ ಹಾಗೂ ಗದಗದಲ್ಲಿಯೂ ಕೆಲವು ಕಾಲ ಕಾರ್ಯನಿರ್ವಹಿಸಿದ್ದ. ಆಗ ಆ ಭಾಗವು ಧಾರವಾಡ ಜಿಲ್ಲೆಗೆ ಸೇರಿತ್ತು. ಮೊಗ್ಲಿಂಗ್ ಧಾರವಾಡ ಜಿಲ್ಲೆಯಿಂದ ಮಂಗಳೂರಿಗೆ ಬಂದು 1838ರಿಂದ 1852ರವರೆಗೆ ಸೇವೆಸಲ್ಲಿಸಿದ. ಈ ಅವಧಿಯಲ್ಲಿ ಆತ ಕೈಗೊಂಡ ಪ್ರಮುಖ ನಿರ್ಧಾರವೆಂದರೆ ಪತ್ರಿಕೆಯೊಂದನ್ನು ಪ್ರಕಟಿಸಿ, ಜನರಿಗೆ ಮಾಹಿತಿ ಒದಗಿಸುವುದು. 1843ರ ಜುಲೈ 1ರಂದು "ಮಂಗಳೂರು ಸಮಾಚಾರ" ಎಂಬ ಒಂದು ದುಡ್ಡಿನ ನಾಲ್ಕು ಪುಟಗಳ ಕಲ್ಲಚ್ಚಿನ ಪತ್ರಿಕೆಯನ್ನು ಹೊರತಂದ. ಅಂಚೆ ಹಾಗೂ ನೇರ ಮಾರಾಟಕ್ಕೆ ಸಹ ಲಬ್ಯವಿದ್ದ ಈ ಪತ್ರಿಕೆ ವಿವಿಧ ಮೂಲಗಳಿಂದ ಸಂಗ್ರಹಿಸಿದ ವತ್ತಮಾನಗಳನ್ನು ಬಹು ಎಚ್ಚರಿಕೆಯಿಂದ ವರ್ಗೀಕರಿಸಿ ಪ್ರಕಟಿಸುತ್ತಿತ್ತು.

ಮೊಗ್ಲಿಂಗ್ ನ ಪತ್ರಿಕಾವೃತ್ತಿಯ ಬಹು ಮಹತ್ವದ ಅಂಶವೆಂದರೆ, ಧರ್ಮಪ್ರಚಾರ ಸಂಸ್ಥೆಯಿಂದ ಹೊರಡಿಸಲ್ಪಟ್ಟ ಪತ್ರಿಕೆಯಾದರೂ, "ಮಂಗಳೂರು ಸಮಾಚಾರ" ಎಲ್ಲ ಬಗೆಯ ವರ್ತಮಾನಗಳನ್ನು ಪ್ರಕಟಿಸುತ್ತಿತ್ತು. ಓದುಗರ ಕೂತುಹಲವನ್ನ ಅರಿತಿದ್ದ ಮೊಗ್ಲಿಂಗ್, ವತ್ತಮಾನಗಳನ್ನು ಬಹು ಎಚ್ಚರಿಕೆಯಿಂದ ಆಯ್ದು, ಭಾಷಾಂತರಿಸಿ ಸರಳ ಕನ್ನಡದಲ್ಲಿ ಪ್ರಕಟಿಸುತ್ತಿದ್ದ. ಇದೊಂದು ಸ್ವತಂತ್ರ ವಾರ್ತಾ ಪತ್ರಿಕೆ ಎನ್ನುವ ರೂಪುರೇಷೆ ಹೊಂದಿತ್ತು ಎಂಬುದು ವಿಶೇಷ. ಇಂಗ್ಲಿಷರ ಆಳ್ವಿಕೆಯ ಆ ಮಹತ್ವದ ದಿನಗಳಲ್ಲಿ ಬಹುತೇಕ ರಾಜಸಂಸ್ಥಾನಗಳು ನಾಶವಾಗಿ, ಕಂಪನಿ ಆಡಳಿತ ವಿಸ್ತಾರವಾಗುತ್ತಿದ್ದ ಕಾಲವದು. ಈ ಎಲ್ಲ ರಾಜಕೀಯ ಬೆಳವಣಿಗೆಗಳ ಕಿರು ಪರಿಚಯಗಳನ್ನು ಈ ಪತ್ರಿಕೆ ಮಾಡುತ್ತಿತ್ತು. ಈ ಪ್ರಕಟಣೆಗೆ ಕನ್ನಡ ಭಾಷಿಕರಿಂದ ಬಂದ ಪ್ರತಿಕ್ರಿಯೆಯನ್ನು ಗಮನಿಸಿದ, ಮೊಗ್ಲಿಂಗ್ ಇದು "ಮಂಗಳೂರು ಸಮಾಚಾರ"ದ ಬದಲಾಗಿ "ಕನ್ನಡ ಸಮಾಚಾರ" ವಾದರೆ ತುಂಬ ಅರ್ಥಪೂರ್ಣವಾಗುತ್ತದೆ ಎಂದು ನಿಶ್ಚಯಿಸಿದ. ಕನ್ನಡ ಭಾಷಿಕರು ವಿಶಾಲವಾದ ಪ್ರದೇಶಗಳಲ್ಲಿ ನೆಲೆಸಿದ್ದಾರೆ ಎಂಬ ಅಂಶವನ್ನ ಆತ ಗಮನಿಸಿ ಪತ್ರಿಕೆಯ ಕ್ಷೇತ್ರ ವ್ಯಾಪ್ತಿ ವಿಸ್ತಾರವಾಗಬೇಕೆಂಬ ಕನಸು ಕಂಡ.

ಪತ್ರಕೆಯೊಂದರ ಮೂಲಕ ಎಲ್ಲ ಕನ್ನಡ ಭಾಷಿಕರನ್ನು ತಲುಪುವ ಹೆಬ್ಬಯಕೆ ಆತನದಾಗಿತ್ತು. ಸುಮಾರು ಎಂಟು ತಿಂಗಳು ಮಂಗಳೂರಿನಲ್ಲಿ ಪ್ರಕಟವಾದ ಈ ಪತ್ರ್ರಿಕೆ ಬಳ್ಳಾರಿಗೆ ಮಾರ್ಚ್ 1844ರಲ್ಲಿ ವರ್ಗಾವಣೆಗೊಂಡಿತು. ನಂತರ "ಕನ್ನಡ ಸಮಾಚಾರ"ವೆಂದು ಪುನರನಾಮಕರಣಕಗೊಂಡಿತು. ಬಳ್ಳಾರಿಯಲ್ಲಿ ಸುಮಾರು ಹತ್ತು ತಿಂಗಳ ಕಾಲ ಈ ಪತ್ರಿಕೆ ಪ್ರಕಟವಾಯಿತು. ಮೊಗ್ಲಿಂಗ್ ನಷ್ಟು ಕ್ರೀಯಾಶಾಲಿ ಸಮಾಚಾರ ಸಂಗ್ರಹಕಾರರು ಬಳ್ಳಾರಿಯಲ್ಲಿ ಲಭ್ಯವಾಗಲಿಲ್ಲ. ಮಂಗಳೂರಿನಲ್ಲಿದ್ದುಕೊಂಡು ಬಳ್ಳಾರಿಯಲ್ಲಿ ಪತ್ರಿಕೆ ನಡೆಸುವ ಆತನ ಸಾಹಸ ಯಶಸ್ವಿಯಾಗಲಿಲ್ಲ.

ಸಿಪಾಯಿ ದಂಗೆಯ ಬೆಳವಣಿಗೆಗಳನ್ನು ಜನತೆಗೆ ಮುಟ್ಟಿಸಬೇಕೆನ್ನುವ ಆಕಾಂಕ್ಷೆಯಿಂದ 13 ವರ್ಷಗಳ ನಂತರ "ಕಂನಡ ವಾರ್ತಿಕ" (ಕೆನರೀಸ್ ಮೆಸೆಂಜರ್) ಪತ್ರಿಕೆಯನ್ನು ಮೊಗ್ಲಿಂಗ್ ಆರಂಭಿಸಿದ. ಎರಕದಲ್ಲಿ ಹೊಯ್ದ ಅಚ್ಚು ಮೊಳೆಗಳನ್ನು ಮೊದಲ ಬಾರಿಗೆ ಈ ಪತ್ರಿಕೆ ಅಳವಡಿಸಿಕೊಂಡಿತ್ತು.

1836ರಿಂದ 1861ರವರೆಗೆ ಮೊಗ್ಲಿಂಗ್ ಪತ್ರಕರ್ತನಾಗಿ, ಸಾಹಿತಿಯಾಗಿ, ಶಿಕ್ಷಕನಾಗಿ, ಅನುವಾದಕನಾಗಿ, ಗಾದೆಗಳ ಸಂಗ್ರಹಕಾರನಾಗಿ ಅಮೋಘವಾದ ಸೇವೆ ಸಲ್ಲಿಸಿದ. ಆತನು ಕನ್ನಡ ಪತ್ರಿಕಾ ಕ್ಷೇತ್ರಕ್ಕೆ ಹಾಕಿಕೊಟ್ಟ ಬುನಾದಿ ಗಟ್ಟಿಯಾದದ್ದು. ಮಂಗಳೂರು, ಗದಗ, ಹುಬ್ಬಳ್ಳಿ ಮತ್ತು ಮಡಿಕೇರಿ ಆತನ ಪ್ರಮುಖ ಕಾರ್ಯಕ್ಷೇತ್ರಗಳಾಗಿದ್ದವು. ಹಲವೇ ತಿಂಗಳುಗಳ ಕಾಲ ಪತ್ರಿಕಾ ಪ್ರಕಟಣೆಯಲ್ಲಿ ತನ್ನ ಚತುರತೆಯನ್ನ ಮೊಗ್ಲಿಂಗ್ ಸಾಬೀತುಪಡಿಸಿ, ಕನ್ನಡ ಪತ್ರಿಕೋದ್ಯಮ ಬೆಳವಣಿಗೆಗೆ ತಳಪಾಯ ಹಾಕಿದ. ತಾನು ಬದುಕಿದ್ದ 70 ವರ್ಷಗಳ ಅವಧಿಯಲ್ಲಿ ಸುಮಾರು 25 ವರ್ಷಗಳ ಕಾಲ ಕನ್ನಡನಾಡಿನಲ್ಲಿ ಆತ ಸಲ್ಲಿಸಿದ ಸೇವೆ ಗುರುತರವಾದದ್ದು. ಪತ್ರಿಕಾ ದಿನಾಚರಣೆಯಂದು ಮೊಗ್ಲಿಂಗ್ ಸ್ಮರಣೆ ಮಾಡದಿದ್ದರೆ ಇಂಥದೊಂದು ದಿನಾಚರಣೆ ಆಚರಿಸಿದ್ದು ಅರ್ಥಪೂರ್ಣ ಎನಿಸುವುದಿಲ್ಲ. ಆದ್ದರಿಂದ ನಾನು ಮೊಗ್ಲಿಂಗ್ ಅವರ ಕಿರುಪರಿಚಯವನ್ನು ತಮ್ಮ ಮುಂದೆ ಇಟ್ಟಿದ್ದೇನೆ.

ಕಳೆದ 168 ವರ್ಷಗಳಲ್ಲಿ ಕನ್ನಡ ಪತ್ರಿಕೋದ್ಯಮ ವೈವಿಧ್ಯಮಯವಾಗಿ ಬೆಳೆದಿದೆ. ಕನ್ನಡ ಪತ್ರಿಕೆಗಳ ಒಟ್ಟು ಪ್ರಸಾರ 30 ಲಕ್ಷಕ್ಕೆ ಏರಿದೆ. ಕನ್ನಡ ಭಾಷಿಕರ ಸಂಖ್ಯೆಗೆ ಹೋಲಿಸಿದರೆ ಇದು ಸಮಾಧಾನಕರವಲ್ಲ. ನೆರೆಯ ಕೇರಳದಲ್ಲಿ ಮಲೆಯಾಳ ಮನೋರಾಮ ದಿನಪತ್ರಿಕೆಯ ಪ್ರಸಾರ 17 ಲಕ್ಷ ಮೀರಿದೆ. ಅಲ್ಲಿ 10 ಲಕ್ಷಕ್ಕಿಂತ ಹೆಚ್ಚು ಮಾರಾಟವಾಗುವ ಮಾತೃಭೂಮಿ ಎನ್ನುವ ಇನ್ನೊಂದು ಪತ್ರಿಕೆಯಿದೆ. ತೆಲಗಿನ ಈ ನಾಡು ಪತ್ರಿಕೆ ಪ್ರತಿನಿತ್ಯ 23 ಲಕ್ಷ ಪ್ರತಿಗಳನ್ನು ಛಾಪಿಸುತ್ತಿದೆ. ಈ ಹಿನ್ನಲೆಯಲ್ಲಿ ಕನ್ನಡ ಪತ್ರಿಕೆಗಳ ಪ್ರಸಾರ ವ್ಯಾಪಕವಾಗಬೇಕಾಗಿದೆ. ಬನ್ನಿ ಪ್ರತಿ ಕನ್ನಡಿಗರ ಮನೆಯಲ್ಲಿಯೂ ಪತ್ರಿಕೆಗಳು ರಾರಾಜಿಸಲಿ. ಜ್ಞಾನ-ಮನರಂಜನೆ ವೈವಿಧ್ಯಮಯವಾಗಿ ಪತ್ರಿಕೆಗಳ ಮೂಲಕ ಲಭ್ಯವಾಗಲಿ ಎಂದು ಆಶಿಸುತ್ತಾ ನನ್ನ ಎರಡು ಮಾತುಗಳನ್ನು ಮುಗಿಸುತ್ತೇನೆ.
ಎಲ್ಲರಿಗೂ ನಮಸ್ಕಾರ, ಕನ್ನಡ ಪತ್ರಿಕಾ ಕ್ಷೇತ್ರ ಚಿರಾಯುವಾಗಲಿ.

ಎಂ.ಎ.ಪೊನ್ನಪ್ಪ